
ಅಡಿಕೆ ಮತ್ತು ತೆಂಗು ಕಳಚೆಯ ಮುಖ್ಯ ಬೆಳೆ. ಇಲ್ಲಿನ ತೋಟಗಳಿಗೆ ಮತ್ತು ಜನರಿಗೆ ಬೆಟ್ಟಗಳಿಂದ ಹರಿದು ಬರುವ ಝರಿನೀರು ಮತ್ತು ಕೆರೆ ನೀರೇ ಆಸರೆ. ಈ ಭಾಗದಲ್ಲಿ ತೋಟಗಳು ಇಳಿಜಾರಾಗಿದ್ದು ತೋಟದ ಕೆಲಸಕ್ಕೆ ಬಹಳಷ್ಟು ಪರಿಶ್ರಮ ಅನಿವಾರ್ಯ. ಹಾಗಂತಲೇ ಇಲ್ಲಿನ ಜನರು ಮೊದಲಿನಿಂದಲೂ ಶ್ರಮಜೀವಿಗಳು. ಹೀಗಾಗಿ ಅಲ್ಲಿನ ಪ್ರತಿಯೊಂದು ಸ್ಥಳೀಯ ಉತ್ಪನ್ನಕ್ಕೂ ಅವರೇ ಬೆಲೆ, ಬಳಕೆಯ ಮಾರ್ಗ ಕಂಡುಕೊಳ್ಳುತ್ತಿದ್ದರು. ಇಂದಿಗೂ ಅದು ಇದೆ. ಹೀಗಾಗಿಯೇ ನಮ್ಮೂರೆಂದರೆ ಹೆಮ್ಮೆ.
ನಮ್ಮೂರಿಗೆ ಯಲ್ಲಾಪುರದಿಂದ ದಿನನಿತ್ಯ ಬಸ್ಸು ಬರುತ್ತದೆ. ಹೊಂಡಗಳಲ್ಲಿ ಹಾರುತ್ತಾ ಇಳಿಯುತ್ತಾ ಬರುವ ಬಸ್ಸು ನಿಲ್ಲುವ ಮೊದಲೇ ಕಿಟಕಿಯಿಂದ ಟವೆಲನ್ನು ಒಗೆದು ಜಾಗವನ್ನಿಡಿದು ಕೂರುತ್ತಿದ್ದ ಆಗಿನ ಜನರು, ಬಾಲ್ಯದಲ್ಲಿ ತಿನ್ನುತ್ತಿದ್ದ ಮಾವಿನಕಾಯಿಗಳು, ಏನೇನೋ ಹೆಸರು ಗೊತ್ತಿರದ ಹಣ್ಣುಗಳ ನೆನಪು, ಆ ಹಸಿರು ತೋಟ ಬೆಟ್ಟಗಳು, ಮಳೆಗಾಲದಲ್ಲಿ ಹುಟ್ಟಿ ಹರಿಯುವ ಅನಾಮಿಕ ಝರಿ - ಜಲಪಾತಗಳು, ಬೇಸಿಗೆಯಲ್ಲಿ ಮುತ್ತಿಗೆ ಹಾಕಿ ಕೊಯ್ಯುತ್ತಿದ್ದ ಜಂಬು ನೇರಳೆ ಹಣ್ಣುಗಳು, ಶಾಲೆ ಬಿಟ್ಟ ಮೇಲೆ ಹೋಗುತ್ತಿದ್ದ ಅಂಗಡಿಗಳು, ಪ್ರತಿವರ್ಷ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳ ಜತೆಗೆ ಕಳಚೆ ಹುಳಿಯ ರುಚಿ ಇಂದಿಗೂ ನನ್ನನ್ನು ಊರಿನೆಡೆಗೆ ಸೆಳೆಯುತ್ತದೆ.
(ಹಸಿರುವಾಸಿ ಪತ್ರಿಕೆಯಲ್ಲಿ ಪ್ರಕಟಿತ ಬರಹ)